Friday, April 1, 2016

ಜಾತಿ ವಿಜಾತಿಗಳು ?

 1.ಎಲುವೀಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ ||

2.ಬೆಂದಾವಿಗೆಯ ಭಾಂಡ ಒಂದೊಂದು ಭೋಗವನು 
ಅಂದಂದಿಗುಂಡು ಒಡೆದು ಹಂಚಾದಂತೆ 
ಬಿಂದುವಿನ ದೇಹ ಸರ್ವಜ್ಞ ||


 3.ನೆಡೆವುದೊಂದೇ ಭೂಮಿ ಕುಡಿವುದೊಂದೇ ಜಲವು
ಸುಡುವಾಗ್ನಿ ಒಂದೇ ರೀತಿಯಲಿರಲು ಈ ನಡುವೆ 
ಕುಲ-ಜಾತಿ ಎತ್ತಣದು ಸರ್ವಜ್ಞ ||

4.ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ-ವಿಜಾತಿ ಎನ್ನಬೇಡ ಆ ದೇವನೊಲಿ
ದಾತನೇ ಜಾತ ಸರ್ವಜ್ಞ ||

5. ಪಂಚವಿಂಶತಿ ತತ್ವ ಸಂಚದ ದೇಹವನು
ಹಂಚೆಂದು  ಕಾಣಲರಿಯದೆ ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ ||

6. ಊರುಗಳ ಮೂಲದಲಿ ಮಾರನರಮನೆಯಲ್ಲಿ
ಭೂರಿ ಜೀವಿಗಳ ಹುಟ್ಟಿಸಿದ ಅಜನಿಗಿ
ನ್ನಾರು ಸರಿಯುಂಟೆ ಸರ್ವಜ್ಞ ||

 7. ದಿಟವೇ ಪುಣ್ಯದ ಬೀಜ ನಟೆಯ ಪಾಪದ ಪುಂಜ
ಕುಟಿಲ ವಂಚನೆಗೆ ಪೋಗದಿರಿ-ನಿಜವ ಪಿಡಿ
ಘಟ್ಟವನೆಚ್ಚದಿರಿ ಸರ್ವಜ್ಞ ||

8. ಸುರ-ತರುವು ಸುರಜೇನು ಸುರಮಣಿ ಸುರಲತೆ
ಪರುಪುಷ್ಟಿ ತನುವು ಹರಿವ ನದಿ-ಯೆಲ್ಲವೂ
ಪರಮನಿಂ ಜನನ ಸರ್ವಜ್ಞ ||

9. ಕುಲಗೆಟ್ಟವರ ಚಿಂತೆ ಯೊಳಗಿರ್ಪರೆಂತೆಲ್ಲಾ
ಕುಲಗೆಟ್ಟ ಶಿವನ ಮೊರೆಹೊಕ್ಕು ಋಷಿಗಳು
ಕುಲಗೋತ್ರರುಗಳು ಸರ್ವಜ್ಞ ||

10. ನಾಲ್ಕು ವೇದವನೋದಿ ಶೀಲದಲಿ ಶುಚಿಯಾಗಿ 
ಶೂಲಿಯಾ ಪದವ ಮರೆದೊದೊಡೆ-ಗಿಳಿಯೋದಿ
ಮಲ ತಿಂದಂತೆ ಸರ್ವಜ್ಞ ||

11. ಕಾಯವಿಂದ್ರಿಯದಿಂದೆ ಜೀವ ವಾಯುವಿನಿಂದೆ
ಕಾಯುವನು ಬ್ರಹ್ಮಸೃಷ್ಟಿ ಎಂದೆಂಬವನ
ಬಾಯ ನೋಡೆಂದ ಸರ್ವಜ್ಞ ||

12. ಜಾತಿ ಸೂತಕವಳಿದು ಭ್ರಾಂತಿಯ ಗುಣವಳಿದು
ಆತುಮನ ನೆಲೆಯ ನರಿತಂಗೆ-ಇ
ನ್ನೇತರ ಚಿಂತೆ ಸರ್ವಜ್ಞ ||

13. ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡೆಂದು ತೊಲಗುವಾ ಹಾರುವನು 
ಹುಟ್ಟಿದನು ಎಲ್ಲಿ ಸರ್ವಜ್ಞ ||

14. ಸತ್ತವನು ತಿಂಬಾತ ಎತ್ತಣದ ಹೊಲೆಯವನು
ಒತ್ತಿ ಜೀವವನು ಕೊರೆ-ಕೊರೆದು ತಿಂಬಾತ ತಾ
ನುತ್ತಮದ ಹೊಲೆಯ ಸರ್ವಜ್ಞ ||

15. ಹೊಲೆಯ ಮಾದಿಗರುಂಡು ತೊಲಗಿ ಬೆಟ್ಟಾ ತೊಗಲು
ಕುಲಜರಿಗೆ ಅನುವಾಯ್ತು-ಹೊಲೆಯರಾ
ನೆಲೆಯಾರು ಬಲ್ಲರೈ ಸರ್ವಜ್ಞ ||

16. ಪಕ್ಕಳೆಯ ಸಗ್ಗಳೆಯೊಳಿಕ್ಕಿದ ನೀರನು
ಚೊಕ್ಕಟವೆನುತ ಕುಡಿವರು ಹೊಲೆ
ಯರಾ ಮಕ್ಕಳಂತೆ ಸರ್ವಜ್ಞ ||

17. ಹಲವು ಮಕ್ಕಳು ಹುಟ್ಟಿ ಕುಲವ ಹೇಳುವರಿಲ್ಲ
ಕುಲಹೀನನೊಬ್ಬ ಮಗ ಹುಟ್ಟಿ-ಆತಗನು
ಕೂಲವ ಹೇಳುವನು ಸರ್ವಜ್ಞ ||

18. ವೇದವೇ ಘನವೆಂದು ವಾದವನು ಮಾಡುವರು 
ವೇದದಲೇನು ನಿಜವಾಯ್ತು ದ್ವಿಜರೊಂದು 
ಬೂದಿಯಾದುದ ಕಂಡೆ ಸರ್ವಜ್ಞ ||

19. ಜೀವ ಜೀವವ ತಿಂದು ಜೀವಿಪುದು ಜಗವೆಲ್ಲ 
ಜೀವದಿಂ ಬೇರೆ ತಿಂಬುವರ ನಾ ಕಾಣೆ ಇ
ನ್ನ್ಯಾವುದೆಂದೆಂಬೆ ಸರ್ವಜ್ಞ ||

20. ನೀರಮುಳಗಿದ ವಿಪ್ರ ಸಾರುವನೆ ಸ್ವರ್ಗವನು 
ಓರಂತೆ ನೀರ ಮುಳುಗಿದ ಕಪ್ಪೆಗಿ
ನ್ನ್ಯಾರು ಸರಿಯಹರು ಸರ್ವಜ್ಞ ||

21. ಹಾರುವನಿಗಿತ್ತವರು ಯಾರು ಬದುಕಿದರಯ್ಯ
ಭೂರಮಣನೆಂಬ ಬಲಿ ಕೆಟ್ಟ-ಹಾರುವರು
ಮಾರಿಕಂಡಯ್ಯ ಸರ್ವಜ್ಞ ||

22. ಹೊಲಗೇರಿಯಲಿ ಹುಟ್ಟಿ ಎಲ್ವಿನಾ ಮನೆ ಮಾಡಿ
ಸಲೆ ಚರ್ಮಧಾರಿ ಎನಿಸಿದ- ಮನುಜರು
ಕುಲವ ಹೇಳುವವರು ಸರ್ವಜ್ಞ ||

23. ಯೋನಿಜರು ಯೋನಿಯನು ಹೀನ ಮಾಡುವುದೇಕೆ
ಆನಂದಮಯ ಶಿವಯೋಗಿ-ಅದಲ್ಲ
ದಿನ್ನೆಲ್ಲಿಂದ ಬಂದ ಸರ್ವಜ್ಞ ||

24. ನರಜನುಮದಲಿ ಹುಟ್ಟಿ ವರಶಾಸ್ತ್ರಗಳನ್ನೋದಿ 
ಪರಮ ಪುಣ್ಯದಲಿ ತೊಳಲುವಾ-ನಿಜ ಪುರುಷ
ಹರಪುರಕೆ ಯೋಗ್ಯ ಸರ್ವಜ್ಞ ||

25. ಜೀವರಾಶಿಗಳೆಲ್ಲ ದೇವತಾಮಯವಕ್ಕು
ಭಾವಿಸಿ ನೋಡೆ ಜೀವತಾ-ಶಿವನ
ದೇವಾಲಯವೇ ಅಕ್ಕು ಸರ್ವಜ್ಞ ||

26. ಮೂರೆಳೆಯನುಟ್ಟಾತ ಹಾರುವೊಡೆ ಸ್ವರಗಕ್ಕೆ
ನೂರೆಳೆಯ ಕೌದಿಯನು ಹೊದ್ದವನು-ತಾ 
ಹಾರನೇಕಯ್ಯಾ ಸರ್ವಜ್ಞ ||

27. ಇಕ್ಕುವವನೂರಿಗೊಂ ಹೊಕ್ಕಲೆಂದೆನಬೇಡ
ಅಕ್ಶಯ ಪದವಿ ಪಡೆದು-ಕೈಲಾಸದಿಂ
ದೊಕ್ಕಲಿರ ಬಂದ ಸರ್ವಜ್ಞ ||

28. ಮುಟ್ಟು ಕಂಡವಳನ್ನು ಮುಟ್ಟಲೊಲ್ಲರು ನೋಡು 
ಮುಟ್ಟು ತಾ ತಡೆದು- ಹುಟ್ಟಿದಾ ಮಗುವನ್ನು
ಮುಟ್ಟುತಿಹರೇಕೆ ಸರ್ವಜ್ಞ ||

2 comments:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ

    ReplyDelete